ಸತೀಶ್ ನಿರ್ಕೇರೆ. ಕಣ್ಣಿನ ಹುಬ್ಬುಗಳಿಂದಲೇ ನೋಡುಗರನ್ನು ಸೆಳೆಯುವ ಇವರು ಯಕ್ಷಗಾನ ರಂಗದಲ್ಲಿ ಸ್ತಿ ವೇಷ ಪಾತ್ರಧಾರಿ. ನಿರಂತರ ೧೦ ವರ್ಷಗಳಿಂದ ತನ್ನನ್ನು ತೊಡಗಿಸಿಕೊಂಡಿದ್ದಾರೆ. ನಿರ್ಕೇರೆಯ ಜನಾರ್ಧನ ಗೌಡ ಹಾಗೂ ವಾರಿಜ ದಂಪತಿಯ ಪುತ್ರನಾಗಿರುವ ಇವರು ಪಿಯುಸಿ ವರೆಗಿನ ಶಿಕ್ಷಣವನ್ನು ಪೂರೈಸಿದ್ದಾರೆ. === ಶಾಲಾ ಜೀವನ === ಸಣ್ಣ ವಯಸ್ಸಿನಲ್ಲೇ ಕಲೆಯನ್ನು ಪೂಜಿಸುವ ವ್ಯಕ್ತಿತ್ವವನ್ನು ಬೆಳೆಸಿಕೊಂಡಿರುವ ಇವರಿಗೆ ಬೆನ್ನೆಲುಬಾಗಿ ನಿಂತದ್ದು ಇವರ ತಂದೆ. ಹಿರಿಯರಿಂದಲೇ ಕಲೆಗೆ ಸ್ಫೂರ್ತಿ ಅನ್ನುವ ಹಾಗೆ ತಂದೆ ಕಹಳೆ ವಾದಕರು. ಇವರ ಆಸಕ್ತಿ ತಂದೆಯ ಪ್ರೆರೇಪಣೆ ಯಕ್ಷರಂಗದಲ್ಲಿ ಬೆಳೆಯಲು ಪ್ರೋತ್ಸಾಹಿಸಿತು. ಭಜನೆಯಿಂದಲೇ ಹುಟ್ಟಿಕೊಂಡ ಆಸಕ್ತಿಯಿಂದ ಏಳೆಯವಯಸ್ಸಿನಲ್ಲೇ ಗೆಜ್ಜೆಕಟ್ಟಿ ರಂಗಸ್ಥಳ ಏರಿದರು. ಎಸ್.ಎಸ್.ಎಲ್.ಸಿ ವಿದ್ಯಾಭ್ಯಾಸ ಪಡೆಯುತ್ತಿರುವ ಸಂದರ್ಭದಲ್ಲಿ ಆಸಕ್ತಿಯ ಮೇರೆಗೆ ಸುಂಕದಕಟೆ ಮೇಳದಲ್ಲಿ ಹಾಸ್ಯ ಪಾತ್ರಗಳ ಮೂಲಕ ಮಿಂಚಿದರು. ಶಾಲಾ ದಿನಗಳಲ್ಲೇ ಗೆಜ್ಜೆ ಕುಣಿತಕ್ಕೆ ಮನಸೋತದ್ದರಿಂದ, ನಂತರದ ದಿನಗಳಲ್ಲಿ ಹರೀಶ್ ಶೆಟ್ಟಿಗಾರ್ ಅವರಲ್ಲಿ ಯಕ್ಷಗಾನ ನಾಟ್ಯ ತರಬೇತಿ ಪಡೆದುಕೊಂಡರು. ಸುಂಕದಕಟ್ಟೆ ಮೇಳದಲ್ಲಿ ಪುಂಡು ವೇಶದ ಮೂಲಕ ಯಕ್ಷಗಾನ ರಂಗಕರ್ಮಿಯಾಗಿ ಬಣ್ಣ ಹಚ್ಚಲು ಪ್ರಾರಂಭಿಸಿ ರಂಗ ವೇದಿಕೆಯನ್ನೇರಿದರು. ಹವ್ಯಾಸಿ ಕಲಾವಿದರಾಗಿ ಕಟೀಲು ಮೇಳ, ಧರ್ಮಸ್ಥಳ ಮೇಳದಲ್ಲಿ ಬಣ್ಣ ಹಚ್ಚಿದರು. === ವಿವಿಧ ಮೇಳಗಳಲ್ಲಿ ತಿರುಗಾಟ === ಕಟೀಲು ಮೇಳದಲ್ಲಿ ಒಂದು ವರ್ಷಗಳ ಕಾಲ ತಿರುಗಾಟ ನಡೆಸಿ ಪ್ರಸ್ತುತ ಧರ್ಮಸ್ಥಳ ಮೇಳದಲ್ಲಿ ತಿರುಗಾಟ ನಡೆಸುತ್ತಿದ್ದಾರೆ. ಮಳೆಗಾಲದಲ್ಲಿ ಮನೆ ಮನೆಗಳಲ್ಲಿ ಆಡಿಸುವಂತಹ ಚಿಕ್ಕಾಟವೆಂದೇ ಪ್ರಸಿದ್ಧಿ ಪಡೆದಿರುವ ಚಿಕ್ಕಮೇಳದಲ್ಲಿಯೂ ತಿರುಗಾಟ ನಡೆಸುತ್ತಾರೆ. ಯಕ್ಷಗಾನದ ತೆಂಕುತಿಟ್ಟಿನಲ್ಲಿ ಬಣ್ಣ ಹಚ್ಚಿರುವ ಅನುಭವಿ ಕಲಾವಿದ ಸತೀಶ್ ನಿರ್ಕೇರೆ. ಇವರು ಸ್ತ್ರೀ ವೇಷ, ಪುಂಡು ವೇಷ, ಕಿರೀಟ ವೇಷ ಹಾಗೂ ಇನ್ನಿತ್ತರ ವೇಷದಲ್ಲಿ ಕಾಣಿಸಿಕೊಳ್ಳುತ್ತಾರೆ. === ಉಚಿತ ತರಬೇತಿ === ಯಕ್ಷಗಾನ ಕಲೆ ಮುಂದಕ್ಕೂ ಉಳಿಯಬೇಕು ಎಂಬ ದೃಷ್ಟಿಯಿಂದ ಮಕ್ಕಳಲ್ಲೂ ಕಲಾತ್ಮಕ ಬೀಜವನ್ನು ಬಿತ್ತುತ್ತಿರುವ ಕಲಾರಂಗದ ರೂವಾರಿ ಸತೀಶ್ ನಿರ್ಕೇರೆ. ಯಕ್ಷಗಾನ ರಂಗದಲ್ಲಿ ಆಸಕ್ತಿಯುಳ್ಳ ಮಕ್ಕಳಿಗೆ ನಿರ್ಕೇರೆ ಭಜನಾ ಮಂದಿರದಲ್ಲಿ ಉಚಿತವಾಗಿ ತರಬೇತಿ ನೀಡುತ್ತಿದ್ದಾರೆ. ಇದರ ಜೊತೆಗೆ ಭಜನಾ ಹಾಡುಗಾರಿಕೆ ಹಾಗೂ ನೃತ್ಯ ರೂಪದ ಭಜನಾ ತರಬೇತಿಯನ್ನು ನೀಡುತ್ತಾರೆ. ಈಗಾಗಲೇ ಇವರಲ್ಲಿ ೮೦ ಮಂದಿ ವಿದ್ಯಾರ್ಥಿಗಳು ಯಕ್ಷಗಾನ ತರಬೇತಿಯನ್ನು ಪಡೆಯುತ್ತಿದ್ದು ಹಲವಾರು ಗೌರರ್ಪಣೆಗಳಿಗೂ ಪಾತ್ರರಾಗಿದ್ದಾರೆ. ಇಲ್ಲಿಯವರೆಗೆ ಹಲವಾರು ಪಾತ್ರಗಳಿಗೆ ಬಣ್ಣ ಹಚ್ಚಿ ಜೀವಂತಿಕೆಯನ್ನು ತುಂಬಿರುವ ಇವರು ಸ್ತ್ರೀ ಪಾತ್ರದಲ್ಲಿ ತನ್ನ ವಿಭಿನ್ನ ಛಾಪನ್ನು ಮೂಡಿಸಿ ಜನಮೆಚ್ಚುಗೆಯನ್ನು ಗಳಿಸಿದ್ದಾರೆ. === ವಿವಿಧ ಪ್ರದೇಶಗಳಲ್ಲಿ ಪ್ರದರ್ಶನ === ಆರು ತಿಂಗಳ ಕಾಲ ನಿರಂತರವಾಗಿ ಬಣ್ಣ ಹಚ್ಚಿಕೊಳ್ಳುವ ಇವರು ಚೆನೈ, ಕೇರಳ, ಮುಂಬೈ, ಗೋವಾ, ಕಲ್ಕತ್ತಾ ಹಾಗೂ ಇನ್ನಿತ್ತರ ಕಡೆಗಳಲ್ಲಿ ತನ್ನ ಯಕ್ಷರಂಗದ ವೇದಿಕೆಯನ್ನು ಹಂಚ್ಚಿಕೊಂಡಿದ್ದಾರೆ. ಹಿಮ್ಮೇಳದಲ್ಲಿ ಕೂಡ ಅನುಭವಿಯಾಗಿರುವ ಇವರು ಜನಾರ್ಧನ ಕುರುಪ ಶಿಶಿಲ ಅವರಲ್ಲಿ ಭಾಗವತಿಕೆ ತರಬೇತಿಯನ್ನು ಪಡೆದುಕೊಂಡಿದ್ದಾರೆ. ಯಕ್ಷಗಾನ ಕಲಾವಿದನಾದವನು ಬರೀ ನೃತ್ಯ, ಮಾತುಗಾರಿಕೆ, ಹಾಡುಗಾರಿಕೆಗೆ ಮಾತ್ರ ಸಿಮೀತನಾಗಲ್ಲದೇ ಭಾಗವತಿಕೆಯಲ್ಲೂ ತನ್ನ ಛಾಪನ್ನು ಮೂಡಿಸಬಹುದು ಎಂಬುದಕ್ಕೆ ಇವರು ಮಾದರಿಯಾಗಿದ್ದಾರೆ. === ಉಲ್ಲೇಖಗಳು === ಪ್ರಜಾವಾಣಿ ಪತ್ರಿಕೆ ಕರಾವಳಿ ವಿಶೇಷಾಂಕ ಸೆ. ೯ ೨೦೧೯